Badagabettu Society

ಗ್ರಾಹಕರ ಸಮಾವೇಶ – 2026

ದೇಶದ ಭವಿಷ್ಯ, ಆರ್ಥಿಕ ಕ್ಷೇತ್ರಕ್ಕೆ ಶಕ್ತಿ ತುಂಬುವ ಉಜ್ವಲ ಅವಕಾಶ ಸಹಕಾರ ರಂಗಕ್ಕಿದ್ದು ಕೇಂದ್ರ ಸರಕಾರ ಪ್ರತ್ಯೇಕ ಸಹಕಾರ ಸಚಿವಾಲಯ ಮೂಲಕ ಸಹಕಾರಿ ವ್ಯವಹಾರದಲ್ಲಿ ಆರ್ಥಿಕ ಶಿಸ್ತು ತಂದಿದೆ ಎಂದು ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಗ್ರಾಹಕರ ಸಮಾವೇಶವನ್ನು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ 01-02-2026 ಭಾನುವಾರದಂದು ಉದ್ಘಾಟಿಸಿ ಮಾತನಾಡಿದರು. ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಏಕ ಮನಸ್ಸಿನಿಂದ ಮಾಡುವ ಕೆಲಸ ಸಾಧನೆಗೆ ಪೂರಕ. ಸ್ವಾತಂತ್ರ್ಯ ಪೂರ್ವದಲ್ಲಿ ಹಿರಿಯರು ಸಹಕಾರ ಸಂಸ್ಥೆ ಸ್ಥಾಪಿಸಿ ಆರ್ಥಿಕ ಶಕ್ತಿ ನೀಡಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ ತವರು ನೆಲ ಕರಾವಳಿಯಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ ಎಂದರು.

ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರ ಚಳವಳಿಯಲ್ಲಿ ಸಂಸ್ಥೆ ಉಳಿಯಲು ಬದ್ಧತೆ, ಇಚ್ಛಾ ಶಕ್ತಿ ಬಲು ಮುಖ್ಯ. ರಾಜಕೀಯದಲ್ಲಿ ಮಾಡಿದ ಕೆಲಸಕ್ಕೆ ಬೆಲೆಯಿಲ್ಲ. ನಾವು ಯಶಸ್ಸು ಪಡೆಯೋದಕ್ಕಿಂತ ನಾವು ಮಾಡಿದ ಕೆಲಸದಿಂದ ತೃಪ್ತಿ ಪಡೆಯಬೇಕು ಎಂದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್, ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುಯೆಲ್, ನಿರ್ದೇಶಕರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಪುರುಷೋತ್ತಮ ಪಿ ಶೆಟ್ಟಿ, ಮನೋಹರ್ ಎಸ್ ಶೆಟ್ಟಿ, ಸಾಧು ಸಾಲ್ಯಾನ್, ಪದ್ಮನಾಭ ಕೆ ನಾಯಕ್, ವಿನಯ ಕುಮಾರ್ ಟಿ.ಎ, ಸದಾಶಿವ ನಾಯ್ಕ್, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ಜಯಾ ಶೆಟ್ಟಿ, ಗಾಯತ್ರಿ ಎಸ್ ಭಟ್ ಉಪಸ್ಥಿತರಿದ್ದರು.

ಅನಘಾ ಬೈಲೂರು ಪ್ರಾರ್ಥಿಸಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಲ. ನೀಲಕಂಠ ಎಮ್. ಹೆಗಡೆ ಗ್ರಾಹಕ ಜಾಗೃತಿ, ಸಂವಾದ ನಡೆಸಿಕೊಟ್ಟರು. ದಯಾನಂದ ಕರ್ಕೇರ, ಸೊಸೈಟಿಯ ಮಲ್ಪೆ ಶಾಖೆಯ ವ್ಯವಸ್ಥಾಪಕಾರದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಸಂಘದ ಸಿಬ್ಬಂದಿಯವರನ್ನೊಳಗೊಂಡ ತಂಡದಿಂದ ಸ್ಯಾಕ್ಸೋಫೋನ್ ವಾದನ, ನೃತ್ಯ ನೂಪುರ ಡ್ಯಾನ್ಸ್ ಅಕಾಡೆಮಿ ಬೈಲೂರು ಇವರಿಂದ ನೃತ್ಯ ಕಾರ್ಯಕ್ರಮ, ಪಿ. ಕಾಳಿಂಗ ರಾವ್ ಸ್ಮೃತಿ ಮೆಲೋಡೀಸ್‌ನ ರಾಜೇಶ್ ಶಾನ್‌ಬೋಗ್ ಬಾರ್ಕೂರು ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ವಿಶೇಷ ಆಕರ್ಷಣೆಯಾಗಿ ಸೊಸೈಟಿಯ ಸಿಬ್ಬಂದಿಗಳು ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ ಮೂಲಕ ಕಲಾಪ್ರಿಯರ ಮನ ಗೆದ್ದರು. ತದನಂತರ ತೆಂಕು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ರಾಜಾ ರುದ್ರಕೋಪ” ಯಕ್ಷಗಾನ ಜನಮನ ಗೆಲ್ಲುವ ಮೂಲಕ ಗ್ರಾಹಕರ ಸಮಾವೇಶವು ಸಂಪನ್ನಗೊಂಡಿತು.